ವಿಷಯಕ್ಕೆ ಹೋಗಿ
ನಾಲ್ಕು ಮೂವತ್ತರ ಕಲರವ!

ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು.

ಇವತ್ತೂ ಕೂಡ ಭಾರದ ಬ್ಯಾಗನ್ನು ಹಾಕಿಕೊಂಡ ಅನಾಮಿಕ ಪುಟಾಣಿಗಳು ಅದೇ ಕಂಪನ್ನು ಸವಿಯುತ್ತಿದ್ದಾರೆ. ಅವತ್ತು ಒಂದು ರೂಪಾಯಿ ಇದ್ದರೆ ಚಾಕೋಲೆಟ್ ತಿನ್ನುತ್ತಿದ್ದಾಗ ಇದ್ದ ಸಮಾಧಾನ ಇವತ್ತು ಕಾಫಿ ಡೇಯಲ್ಲಿ ಕುಳಿತರು ಸಿಗುವುದಿಲ್ಲ.
ನಾನಿಲ್ಲಿ ಹೇಳ ಹೊರಟಿದ್ದು ಅಂತಹ ಪುಟ್ಟು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ತೆರುತ್ತಿರುವ ಬೆಲೆಯ ಕುರಿತು.
ತೀರ್ಥಹಳ್ಳಿಯ ಆರ್ಥಿಕ ಪರಿಸ್ಥಿತಿಗೋ ಅಥವಾ ಅಲ್ಲಿನ ಅಡಿಕೆ ಬೆಳೆಗಿರುವ ಬೆಲೆಗೊ ಸಾಮಾನ್ಯರೂ ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಗಲ್ಲಿಗೊಂದರಂತೆ ಪೇಯಿಂಗ್ ಗೆಸ್ಟ್‌ಗಳಿವೆ. ಸ್ವಲ್ಪ ಹಣವಂತರು ತಮ್ಮ ಮಕ್ಕಳನ್ನು ಅಂತಹ ಪೇಯಿಂಗ್ ಗೆಸ್ಟ್‌ಗಳಲ್ಲಿ ಬಿಡುತ್ತಾರೆ. ನಾನು ೮ನೆ ತರಗತಿಯಲ್ಲಿರುವಾಗ ಎರಡೂವರೆ ವರ್ಷದ ಮಗುವೊಂದು ಆಗಷ್ಟೇ ಎಲ್‌ಕೆಜಿ ಸೇರಿತ್ತು ಅಥವಾ ಸೇರಿಸಲಾಗಿತ್ತು. ಇನ್ನೂ ಆಮ್ಮನ ಮಮತೆಯ ಮಡಿಲಿನಲ್ಲಿ ಸಹಜ ಸಂಸ್ಕಾರಗಳನ್ನು ಕಲಿಯಬೇಕಿದ್ದ ಪುಟಾಣಿ ಹುಡುಗನಿಗೆ ದಿನಾ ಎ.ಬಿ.ಸಿ.ಡಿ ಕಲಿಯಲಿಲ್ಲ ಎಂದು ಹೊಡೆತಗಳೂ ಬೀಳುತ್ತಿದ್ದವು. ಅವನ ಅಪ್ಪ, ಅಮ್ಮ ವಾರಕ್ಕೊಮ್ಮೆ ಬಂದು ಭಾನುವಾರದ ರಜೆಗೆ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮಮತೆಯನ್ನು ಧಾರೆ ಎರೆಯುತ್ತಿದ್ದರು!.
ಇಂತಹದೊಂದು ಸಂಸ್ಕೃತಿ ತೀರ್ಥಹಳ್ಳಿಯಲ್ಲಿ ಶ್ರೀಮಂತಿಕೆಯ ಸಂಕೇತ ಕೂಡ. ಮದುವೆಗಳಲ್ಲಿ ಅಥವಾ ಇನ್ನಾವುದೋ ಸಂಮಾರಂಭದಲ್ಲಿ ಎದುರಿಗೆ ಸಿಕ್ಕ ಸಂಬಂಧಿಕರ ಎದುರಿಗೆ ತಮ್ಮ ಮಕ್ಕಳು ಬೋರ್ಡಿಂಗ್‌ನಲ್ಲಿದ್ದಾರೆ ಎಂದು ಹೇಳಿಕೊಳ್ಳುವಲ್ಲಿ ಎಂತಹದೊ ಒಣ ಪ್ರತಿಷ್ಠೆ ಎದ್ದು ಕಾಣುತ್ತಿರುತ್ತದೆ.

ಕೆಲವು ಮಕ್ಕಳು ದಿನ ನಿತ್ಯ ತೀರ್ಥಹಳ್ಳಿಗೆ ಗಿಜಿಗುಡುವ ಬಸ್ಸುಗಳಲ್ಲಿ ಓಡಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅಂತವರದು ಒಂದು ಕತೆ. ಅದರ ಅನುಭವವೇ ಬೇರೆ. ದಿನಪ್ರತಿ ನೋಡುವ ಹೊಸ ಹೊಸ ಜನ. ಮೈಗೆ ತಾಕುವ ಮೊದಲ ಸ್ಪರ್ಷ, ಮೊದಲ ಪ್ರೀತಿ ಅರಳುವ ಮಾಗಿ ಕಾಲದ ರೋಮಾಂಚನಗಳಿಂದಾಗಿ ಈ ಬಸ್ಸಿನ ಪ್ರಯಾಣ ಪ್ರತಿನಿತ್ಯದ ಪಿಕ್‌ನಿಕ್ಕು.
ಮೂರು ವರ್ಷದ ಮಗುವಿನಿಂದ ಹಿಡಿದು ಕಾಲೇಜು ಓದುವವರು ಒಟ್ಟಿಗೆ ಓಡಾಡುವುದರಿಂದ ಒಂತರದ ಬಾಂಧವ್ಯ ಬೆಳೆಯುತ್ತದೆ. ನಾವು ಹತ್ತುವ ಸ್ಟಾಪಿಗಿಂತ ಮುಂಚೆ ಹತ್ತಿದವರು ನಮಗಾಗಿ ಸೀಟು ಕಾಯ್ದಿರಿಸಿಕೊಂಡು ಬರುತ್ತಿದ್ದರು. ಮತ್ತೆಲ್ಲೋ ಹತ್ತುವ ಹೊಸ ಹುಡುಗಿ ನಮ್ಮ ಪಕ್ಕದಲ್ಲೇ ನಿಂತುಕೊಳ್ಳಲಿ, ಆವಳ ಬ್ಯಾಗನ್ನು ನಾವೇ ತೊಡೆಯ ಮೇಲೆ ಇಟ್ಟುಕೊಳ್ಳುವಂತಾಗಲಿ ಎಂದು ಬೆಳಗ್ಗಿನ ಪ್ರಾರ್ಥನೆ ಬೇರೆ.

ಹೀಗೆ ನನ್ನ ಬಾಲ್ಯದ ಜೊತೆ ಬಸ್ಸಿಗೊಂದು ಭದ್ರ ನೆನೆಪುಗಳ ಜಾಗ ಲಭ್ಯವಾಗಿದ್ದು. ಮುಂದೆ ಪಿಯುಸಿಗೆ ಬರುವ ಹೊತ್ತಿಗೆ ಆಗ ಪದವಿ ಓದುತ್ತಿದ್ದ ಹುಡುಗ-ಹುಡುಗಿಯರೆಲ್ಲಾ ಸೇರಿ ಒಂದು ಪಿಕ್‌ನಿಕ್‌ಗೆ ಹೋಗಿದ್ದೆವು. ನಾನೊಬ್ಬನೆ ಚಿಕ್ಕವನು. ಆದರೂ ಅವರೆಲ್ಲಾ ತೋರಿಸಿದ ಆತ್ಮೀಯತೆ ಇವತ್ತಿಗೂ ಮರೆಯಲಾಗುತ್ತಿಲ್ಲ. ನನ್ನ ಅಕ್ಕನ ಸ್ನೇಹಿತೆಯೊಬ್ಬಳು ನನಗೆ ಅದೆಷ್ಟು ಹಿಡಿಸಿದ್ದಳು ಎಂದರೆ ಅವಳ ಜೊತೆಯಲ್ಲಿ ಹೇಳಲಾರದ ಆತ್ಮೀಯತೆ. ದಿನ ಅವಳಿಗಾಗಿ ನಾನು ಸೀಟು ಹಿಡಿದಿಡುವುದು, ನನಗಾಗಿ ಅವಳು ಸೀಟು ಕಾಯ್ದಿರಿಸುವು. ಕೊನೆಗೊಮ್ಮೆ ಬೇಸಿಗೆ ರಜೆ ಕಳೆದು ಅವಳು ಬರಲೇ ಇಲ್ಲ. ಒಳ್ಳೆಯ ಸಂಬಂಧ ಬಂದಿದ್ದರಿಂದ ಅವಳ ಮನೆಯಲ್ಲಿ ಮದುವೆ ಮಾಡಿದ್ದರು. ಹಾಗೆ ಮೊದಲ ಆತ್ಮೀಯ ಸಂಬಂಧವೊಂದು ಕಳಚಿಕೊಂಡಿತು.
ಉಳಿದವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಹೊರಟು ಹೋದರು. ನಾನು ತೀರ್ಥಹಳ್ಳಿ ಬಿಟ್ಟೆ. ತುಂಬಾ ಆತ್ಮೀಯ ಬಾಂಧವ್ಯಗಳೂ ವ್ಯವಹಾರಿಕವಾಗತೊಡಗಿದ್ದರ ಮೊದಲ ಅನುಭವ. ಸಿಕ್ಕರೂ ಮಾತನಾಡುವಾಗ ಮೊದಲಿನ ಮಮತೆ ಮರೆಯಾಗಿದೆ. ಇವೆಲ್ಲಾ ಸಹಜ ಇರಬಹುದು.

ಇತ್ತೀಚೆಗೆ ಅದೇ ನಾಲ್ಕುವರೆ ಗಂಟೆಯಗೆ ಬಸ್ ನಿಲ್ದಣಕ್ಕೆ ಹೋದರೆ ಮತ್ತದೆ ಪುಟಾಣಿ ಮಕ್ಕಳ ಬೆನ್ನ ಮೇಲೆ ಭಾರದ ಬ್ಯಾಗುಗಳು. ಅಂಗಡಿ ಮುಂದೆ ಚಿಲ್ಲರೆ ಹಿಡಿದು ನಿಂತ ಕೈಗಳು. ಪಿಯುಸಿಗೆ ಬರುತ್ತಿರುವವರ ಕೈಯಲ್ಲಿ ಮೊಬೈಲ್‌ಗಳು. ಪರಸ್ಪರ ಪರಿಚಯವೇ ಇಲ್ಲವೇನೊ ಎಂಬಂತೆ ಕುಳಿತುಕೊಂಡವರು.

ಇವೆಲ್ಲವುಗಳ ನಡುವೆ, ಸೋಮವಾರ ಸಂತೆಯ ತರಕಾರಿ ಒಣ ಮೀನಿನ ವಾಸನೆ ಮಾತ್ರ ಹಾಗೆ ಇತ್ತು. ಅದೇ ಕಲರವ ಮತ್ತೊಂದು ಮುಖ!

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ
ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ