ನಮಗೆ ಈತ ಭಯೋತ್ಪಾದಕ. ಅವರಿಗೆ ಬರೀ ‘ಬಂದೂಕುಧಾರಿ!’
ಪ್ರಶಾಂತ್ ಹುಲ್ಕೋಡು
ಮಂಗಳವಾರ, 2009 (06:04 IST)
ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗೊತ್ತಲ್ಲ. ಅದೇ ಮುಂಬೈ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಆರೋಪಿ. ಸಧ್ಯ ಪ್ರಪಂಚದ ಮಾಧ್ಯಮಗಳ ಮುಖ ಪುಟದಲ್ಲಿ ಕಸಬ್ ಜಾಗ ಪಡೆದುಕೊಂಡಿದ್ದಾನೆ. ವಿಶೇಷ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತನ್ನ ಉಡಾಫೆ- ಹಾಗೂ ವಿಚಿತ್ರ ನಡವಳಿಕೆಗಳಿಂದ ಎಲ್ಲರ ಗಮನ ಸೆಳೆದಿರುವ ಕಸಬ್ ಕುರಿತಾದ ಲೇಟೆಸ್ಟ್ ಸುದ್ಧಿಯೊಂದು ಬಂದಿದೆ. ಏನಪ್ಪ ಅಂದ್ರೆ, ಕಸಬ್ ಹಾಗು ಆತನ ಉಳಿದ ೯ ಜನ ಕಳೆದ ನವೆಂಬರ್ನಲ್ಲಿ ಮುಂಬೈ ಎಂಬ ಮಹಾನಗರಿಗೆ ಲಗ್ಗೆ ಇಟ್ಟದ್ದು ನಿಮಗೆ ಗೊತ್ತೇ ಇದೆ. ಈಗ ಅವರ ಕೃತ್ಯವನ್ನು ಏನೆಂದು ಕರೆಯಬೇಕು ಎಂದು ಸುದ್ಧಿ ಮನೆಗಳ ಪದ ಪ್ರಯೋಗಶಾಲೆಯಲ್ಲಿ ಸಾಣೆ ಹಿಡಿಯಲಾಗುತ್ತಿದೆ.
ಇದಕ್ಕೆ ಕಾರಣವೂ ಇದೆ. ಕಸಬ್ ವಿಚಾರಣೆಗಳನ್ನು ವರದಿ ಮಾಡುತ್ತಿರುವ ಅಮೆರಿಕಾದ ಬಹುತೇಕ ಮಾಧ್ಯಮಗಳು ಕಸಬ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿಲ್ಲ. ನ್ಯೂಯಾರ್ಕ್ ಟೈಮ್ಸ್ನಿಂದ ಹಿಡಿದು ವಾಲ್ ಸ್ಟ್ರೀಟ್ ಜರ್ನಲ್ವರೆಗೆ ಕಸಬ್ ಗನ್ ಮ್ಯಾನ್ ಅಷ್ಟೆ. ಅಮೆರಿಕಾದ ಪತ್ರಿಕೆಗಳ ಈ ಪದ ಪ್ರಯೋಗ ಸುದ್ಧಿ ಪತ್ರಿಕೆಗಳಲ್ಲಿ ಭಾಷೆ ಬಳಕೆಯ ಕುರಿತಾದ ಹೊಸ ಚರ್ಚೆಗೆ ಕಾರಣವಾಗಿದೆ.
ಕಸಬ್ ನ್ಯಾಯಾಲಯದಲ್ಲಿ ಇದ್ದಕ್ಕಿದ್ದ ಹಾಗೆ ‘ನಾನು ತಪ್ಪು ಮಾಡಿದ್ದೇನೆ, ನನ್ನನ್ನು ಗಲ್ಲಿಗೇರಿಸಿ’ ಎಂದು ತಪ್ಪೊಪ್ಪಿಕೊಂಡ ನಾಟಕೀಯ ಬೆಳವಣಿಗೆ ನಡೆದ ನಂತರ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ೪೨೮ ಪದಗಳ ವರದಿಯೊಂದನ್ನು ಪ್ರಕಟಿಸಿತು. ‘ತಪ್ಪೊಪ್ಪಿಕೊಂಡ ಮುಂಬೈ ಗನ್ ಮ್ಯಾನ್’ ಎಂಬ ತಲೆಬರಹ ಹೊತ್ತಿದ್ದ ಈ ವರದಿಯಲ್ಲಿ ಎಲ್ಲಿಯೂ ‘ಭಯೋತ್ಪಾದಕ’ ಎಂಬ ಪದವನ್ನು ಬಳಸಲಿಲ್ಲ. ಹಾಗೆಯೆ ೧೦೫೦ ಪದಗಳ ನ್ಯೂಯಾರ್ಕ್ ಟೈಮ್ಸ್ನ ಇಂತಹದೇ ವರದಿಯಲ್ಲಿ ಕಸಬ್ ಕೇವಲ ‘ಶಂಕಿತ ದಾಳಿಕೋರ’ ಅಷ್ಟೆ. ಆದರೆ ವಾಲ್ ಸ್ಟ್ರೀಟ್ ಜರ್ನಲ್ ಮುಂಬೈ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದರೂ, ಕಸಬ್ ಪಡೆಯನ್ನು ‘೧೦ ಶಂಕಿತ ಗನ್ ಮೆನ್’ ಎಂದು ಹೆಸರಿಸಿತ್ತು.
ಎಂತಹ ವಿಚಿತ್ರ ನೋಡಿ, ಭಾರತದ ಪತ್ರಿಕೆಗಳ ಪಾಲಿಗಾಗಲೇ ಭಯೋತ್ಪಾದಕರಾದವರು ಅಮೆರಿಕಾದ ಪತ್ರಿಕೆಗಳ ಪಾಲಿಗೆ ಗನ್ ಮೆನ್ಗಳು, ದಾಳಿಕೋರರು, ಶಂಕಿತ ಕೊಲೆಗಡುಕರು ಅಷ್ಟೆಯಾಗಿದ್ದಾರೆ. ಹಾಗಾಗಿಯೆ ಅಮೆರಿಕಾದ ಪತ್ರಿಕೆಗಳಲ್ಲಿ ಮುಂಬೈ ಘಟನೆಯ ಕುರಿತು ವರದಿ ಮಾಡುವಾಗ ಬಳಸ್ಪಡುತ್ತಿರುವ ಪದ ಪ್ರಯೋಗಗಳಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಓದುಗರು ಇದಕ್ಕೆ ತೀಕ್ಷ್ಣವಾಗಿಯೆ ತಿರುಗೇಟು ನೀಡಿದ್ದಾರೆ. ಕಸಬ್ನಂತವರು ಭಯೋತ್ಪಾದಕರಾಗದೇ ಸ್ವಾತಂತ್ರ್ಯ ಹೋರಾಟಗಾರರಾಗಲೂ ಸಾಧ್ಯವಾ ಎಂದು ಜಾಣ ಓದುಗರೊಬ್ಬರು ನ್ಯೂಯಾರ್ಕ್ ಟೈಮ್ಸ್ಗೆ ಪತ್ರ ಬರೆದಿದ್ದಾರೆ.
ಇದಕ್ಕೆ ಟೈಮ್ಸ್ನ ಸಾರ್ವಜನಿಕ ವಿಭಾಗದ ಸಂಪಾದಕರಾಗಿರುವ ಕ್ಲಾರ್ಕ್ ಹೋಐಟ್ ಅಷ್ಟೆ ಜಾಣ್ಮೆಯ ಉತ್ತರವನ್ನು ನೀಡಿದ್ದಾರೆ. ‘ಮುಂಬೈ ದಾಳಿ ನಡೆದ ನಂತರ ಟೈಮ್ಸ್ನಲ್ಲಿ ಹಲವು ವರದಿಗಳು ಪ್ರಕಟವಾಗಿವೆ. ಇದರಲ್ಲಿ ವಿಭಿನ್ನ ಪದಗಳನ್ನು ಬಳಸಲಾಗಿದೆ. ನಮಗೆ ಇಂತಹದೆ ಪದಗಳನ್ನು ಬಳಸಬೇಕೆಂಬ ಕಟ್ಟುಪಾಡುಗಳು ಇಲ್ಲ. ಆದರೆ ವರದಿಯಲ್ಲಿ ಬಳಸುವ ಪದಗಳು ಸೂಕ್ಷ್ಮವಾಗಿರಬೇಕು. ಮುಂಬೈ ದಾಳಿ ನಡೆಸಿದವರು ತಮ್ಮನ್ನು ತಾವು ಎಲ್ಲಿಯೂ ಭಯೋತ್ಪಾದಕರು ಎಂದು ಕರೆದುಕೊಂಡಿಲ್ಲ. ಸಹಜವಾಗಿಯೇ ಪತ್ರಿಕೆಗಳು ಭಯೋತ್ಪಾದಕರು ಎಂದು ಇಂತವರನ್ನು ಕರೆದರೆ ಜನ ಸುಲಭವಾಗಿ ನಂಬುತ್ತಾರೆ. ಆದರೆ ರಾಜಕೀಯ, ಧಾರ್ಮಿಕ, ಪ್ರಾದೇಶಿಕವಾದ ಬೇಡಿಕೆಗಳನ್ನಿಟ್ಟುಕೊಂಡು ಜನರ ಮೇಲೆ ದಾಳಿ ಮಾಡುವವರನ್ನು ಏನೆಂದು ಕರೆಯಬೇಕು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಇವೆಲ್ಲ ಏನೇ ಇರಲಿ, ಆರೋಪಿಗಳಿಗೂ ಅಪರಾಧಿಗಳಿಗೂ ದೊಡ್ಡ ವ್ಯತ್ಯಾಸವಿರುತ್ತದೆ. ಮುಂಬೈ ದಾಳಿಯನ್ನು ಹೊರತು ಪಡಿಸಿ ಹೇಳುವುದಾದರೆ, ಬಹುತೇಕ ಪ್ರಕರಣಗಳಲ್ಲಿ ನಿರಪರಾಧಿಗಳು ಆರೋಪಗಳನ್ನು ಹೊತ್ತಿರುತ್ತಾರೆ. ಆದರೆ ಸುದ್ಧಿ ಮನೆಯಲ್ಲಿರುವವರು ಇಂತಹ ಸೂಕ್ಷ್ಮವನ್ನು ಗಮನಿಸದೆ ಅಪರಾಧ ಸಾಬೀತಾದ ರೀತಿಯಲ್ಲಿ ವರದಿಗಳನ್ನು ಕೀಲಿಸುತ್ತಾರೆ. ಅಮೆರಿಕಾದ ಬಹುತೇಕ ಪತ್ರಿಕೆಗಳು ಮುಂಬೈ ದಾಳಿಯ ಕುರಿತು ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗದೆ ಘಟನೆಯಲ್ಲಿ ಕಸಬ್ನನ್ನು ಆರೋಪಿಯನ್ನಾಗಿ ಮಾಡಲು ಹಿಂದೇಟು ಹಾಕುತ್ತಿವೆ ಎಂಬ ಮಾತಿದೆ.
ಒಟ್ಟಿನಲ್ಲಿ ಕಾಫಿರನ್ನು ಮುಗಿಸಿ ಸ್ವರ್ಗ ಸೇರಲು ಬಂದ ಕಸಬ್ ಎಂಬ ಬಿಸಿ ರಕ್ತದ ಹುಡುಗ ಇವತ್ತು ಪ್ರಪಂಚದ ಸುದ್ಧಿಯ ಸೆಂಟರ್ ಆಫ್- ಸೆನ್ಸೇಶನ್ ಆಗಿದ್ದಾನೆ.