ವಿಷಯಕ್ಕೆ ಹೋಗಿ
ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ.....

ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ ನಿರ್ದಿಷ್ಟ ಯೋಜನೆಗಳೇನು ಇರಲಿಲ್ಲ. ನೆರೆ ಸುದ್ದಿಗಳನ್ನು ಟಿವಿ, ಪತ್ರಿಕೆಗಳಲ್ಲಿ ಓದಿದ್ದೆ. ಹಾಗಾಗಿ ಮರು ಯೋಚನೆ ಮಾಡದೆ ಇದ್ದ ಚಿಲ್ಲರೆ ದುಡ್ಡನ್ನು ಎತ್ತಿಕೊಂಡು ಹೊರಟು ನಿಂತಿದ್ದೆ.

ಮುಂದಿನ ೧೦ದಿನ, ೯ ರಾತ್ರಿ ಸರಿ ಸುಮಾರು ೨೫೦ ಗಂಟೆಗಳನ್ನು ನೆರೆ ಆವೃತ ಪ್ರದೇಶಗಳಲ್ಲಿ ಓಡಾಡಿ ಮತ್ತೆ ಗೂಡು ಸೇರಿಕೊಂಡೆ. ಎದುರಿಗೆ ನಾವು ಚಿತ್ರೀಕರಿಸಿಕೊಂಡ ವಿಡಿಯೋ ಟೇಪುಗಳು ಹಾಗೂ ಸಾವಿರಕ್ಕೂ ಅಧಿಕ ಫೋಟೊಗಳಿದ್ದವು. ಅವತ್ತೇ ಬ್ಲಾಗಿಗೆ ಬರೆದು ಬಿಡಬೇಕು ಅಂದುಕೊಂಡೆ. ಆದರೆ ಅಷ್ಟರಲ್ಲೇ ರಾಜ್ಯದ ರಾಜಕಾರಣದಲ್ಲಿ ಬಂಡಾಯದ ಬಿಸಿ ಆರಂಭವಾಯಿತು. ಯಡ್ಡಿ-ರೆಡ್ಡಿ ಬಣಗಳ ನಡುವಿನ ಕದನದಲ್ಲಿ ನೆರೆ ತೆರೆ-ಮರೆಗೆ ಸರಿದಂತಾಗಿತ್ತು. ಕೊನೆಗೆ ಕೆಲವು ಗೆಳೆಯರ ಅಪೇಕ್ಷೆ ಮೇರೆಗೆ ನೆರೆ ಹಾಗೂ ನಮ್ಮ ಸೀಮಿತ ಅನುಭವಗಳನ್ನು ಇಟ್ಟುಕೊಂಡು ಒಂದು ಸಾಕ್ಷ್ಯ ಚಿತ್ರವನ್ನು ಮಾಡುವ ಸಾಹಸಕ್ಕೆ ಇಳಿದುಬಿಟ್ಟೆವು. ಅಲ್ಲಿಗೆ ಬ್ಲಾಗ್ ಮತ್ತೆ ಮರೆತೇ ಹೊದಂತಾಗಿತ್ತು. ಸಧ್ಯ ಡಾಕ್ಯುಮೆಂಟರಿಗಾಗಿ ಸ್ಕ್ರಿಪ್ಟ್ ಕೆಲಸ ಮುಗಿಸಿ ಮತ್ತೆ ಬ್ಲಾಗ್ ಅಂಗಳದಲ್ಲಿ ಬಂದು ನಿಂತಿದ್ದೇನೆ.
ಆದರೆ ನೆರೆಯ ಕುರಿತು ನಾನು ನನ್ನ ಅನುಭವಗಳನ್ನು ದಾಖಲಿಸಬಹುದೇ ಹೊರತು ಉಳಿದ ಮಾಹಿತಿಗಳು ಈಗಾಗಲೇ ಟಿವಿ-ಪತ್ರಿಕೆಗಳಲ್ಲಿ ಬಂದಾಗಿದೆ. ಮತ್ತೆ ಅದನ್ನೇ ಬರೆಯುವುದು ಹೊಸತನವೂ ಅಲ್ಲ. ಉಳಿದದ್ದು ನಮ್ಮ ನೆರೆ ಪೀಡಿತ ಜಿಲ್ಲೆಗಳಲ್ಲಿ ಯಾವ ಟಿವಿ, ಪತ್ರಿಕೆಗಳ ಕಣ್ಣಿಗೆ ಬೀಳದ ಕೆಲವನ್ನು ಇಲ್ಲಿ ಬರೆಯಬೇಕು ಎಂದುಕೊಂಡ್ಡಿದ್ದೇನೆ. ಹಾಗಾಗಿ ಇದು ನೆರೆಯ ನಾಡಲ್ಲಿ ಕಂಡ ವೈಯುಕ್ತಿಕ ಅನುಭವಗಳು ಎಂದು ಕರೆಯುವುದೇ ಲೇಸು. ಮತ್ತೆ ಇದೊಂದು ವಿಚಿತ್ರ ಪ್ರವಾಸ ಕಥನ ಕೂಡ!

@

ಮುಂಜಾನೆಯ ಮೊದಲ ಕಿರಣ ಭೂಮಿಗೆ ತಾಕುವ ಸಮಯದಲ್ಲಿ ಬಸ್ಸು ಹೊಸಪೇಟೆಯ ರಸ್ತೆಯಲ್ಲಿ ಓಡುತ್ತಿತ್ತು. ಹಿಂದಿನ ವಾರ ಪೂರ್ತಿ ಬಿದ್ದ ಮಳೆಗೆ ಮಲೆನಾಡಿನ ಹಸಿರನ್ನು ನಾಚಿಸುವಂತೆ ಹೊಸಪೇಟೆಯ ತುಂಗ-ಭದ್ರ ಅಣೆಕಟ್ಟಿನ ಸುತ್ತಲಿನ ಪರಿಸರ ಕಂಗೊಳಿಸುತ್ತಿತ್ತು. ಆ ಒಂದು ಕ್ಷಣ ಮುಂದೆ ಎದುರಾಗಲಿದ್ದ ನೆರೆಯ ಭೀಕರ ಹಳ್ಳಿಗಳ ಚಿತ್ರಣ ಮರೆಯಾಗಿ ಹಸಿರಿನ ಸೊಬಗನ್ನು ಸವಿಯುವ ಸರದಿ ನನ್ನದಾಗಿತ್ತು.



“ಮುಂಜಾನೆ ೭ಕ್ಕೆ ರಾಯಚೂರಲ್ಲಿರ್ತೀರ ಸರ” ಎಂದ ಬಸ್ಸು ಸಿಬ್ಬಂದಿಗಳ ಅಶ್ವಾಸನೆಯನ್ನು ಕಡಿದು ಹೋಗಿದ್ದ ರಸ್ತೆ ಸಂಪರ್ಕ ವ್ಯವಸ್ಥೆ ಸುಳ್ಳಾಗಿಸಿತ್ತು. ರಾಯಚೂರು ತಲುಪುವ ಹೊತ್ತಿಗೆ ಮದ್ಯಾಹ್ನವಾಗಿತ್ತು. ಅಲ್ಲಿನ ಹೋಟೆಲ್ ಒಂದರಲ್ಲಿ ನಮ್ಮ ಲಗೇಜುಗಳನ್ನು ಇಳಿಸಿ, ಹೊಟ್ಟೆಗೆ ಒಂದಷ್ಟು ತುಂಬಿಸಿಕೊಂಡು ’ಎಲೆ ಬಿಚ್ಚಾಲೆ’ ಎಂಬ ಆಂದ್ರ ಪ್ರದೇಶದ ಅಂಚಿಗಿರುವ ಹಳ್ಳಿ ತಲುಪುವಾಗ ಸಂಜೆಯಾಗಿತ್ತು. ಸೂರ್ಯ ತನ್ನ ಕೆಲಸ ಮುಗಿಸಿ ವಿದಾಯ ಹೇಳುವ ತರಾತುರಿಯಲ್ಲಿದ್ದ. ಊರ ಜನ ಕರ್ನೂಲಿನ ಕೆಲವು ಸ್ವಯಂ ಸೇವಕರು ತಂದಿದ್ದ ಬಟ್ಟೆಗಳಿಗಗಾಗಿ ಕಿತ್ತಾಡುತ್ತಿದ್ದರು. ಉಳಿದ ಕೆಲವರು ನಮ್ಮನ್ನು ಕಂಡೊಡನೆ ’ಇಲ್ಲಿ ಬನ್ರಿ, ನಮ್ ಮನಿ ನೋಡ್ರಿ ಸರ’ ಎಂದು ಹಿಂದೆ ಬಿದ್ದರು. ’ಟಿವಿ ಲಿ ಕಾಣ್ತೀವೇನ್ರಿ’ ಎಂದ ಕೆಲವರು ಕ್ಯಾಮರ ಎದುರಿಗೆ ನಿಂತು ನಗಲು ಆರಂಭಿಸುತ್ತಿದ್ದರು.
ವಿಚಿತ್ರ ಕಲ್ಪನೆಗಳನ್ನು ತುಂಬಿಕೊಂಡು ಹೋಗಿದ್ದ ನಮಗೆ ಇದು ಅನಿರೀಕ್ಷಿತ ಸ್ವಾಗತ. ನಾವು ಹೋಗುವ ಹೊತ್ತಿಗಾಗಲೇ ನೆರೆ ಇಳಿದು ಹೋಗಿತ್ತು. ಊರುಗಳು ಸ್ಮಶಾನದಂತೆ ಕಾಣುತ್ತಿದ್ದವು. ಜನ ಉಟ್ಟ ಬಟ್ಟೆಯಲ್ಲಿ ತಮ್ಮದೆಲ್ಲವನ್ನು ಕಳೆದುಕೊಂಡು ನಿಂತಿದ್ದರು. ಸರಕಾರ ಎಂಬ ಅಧಿಕೃತ ವ್ಯವಸ್ಥೆ ನಾಪತ್ತೆಯಾಗಿತ್ತು. ಇವೆಲ್ಲವು ಎಷ್ಟು ವಾಸ್ತವವೋ ಅಷ್ಟೆ ವಾಸ್ತವವಾದದ್ದು ನೆರೆ ಪೀಡಿತ ಜನರ ತದ್ವಿರುದ್ದ ನಡವಳಿಕೆ. ನಾವು ಚುನಾಯಿಸಿದ ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ನಮ್ಮ ಪಾಲಿಗೆ ಇದ್ದಾರೆ ಹಾಗೂ ಇರಬೇಕು ಎಂಬ ಸಾಮಾನ್ಯ ಗ್ರಹಿಕೆ ಕೂಡ ಇರುವ ಜನರನ್ನು ಊರಲ್ಲಿ ಹುಡುಕಿದರೂ ಸಿಗಲಿಲ್ಲ!. ಇದು ಯಾರ ತಪ್ಪು ಎಂಬುದಕ್ಕಿಂತ ಹಲವಾರು ವರ್ಷಗಳ ವೈಫಲ್ಯಗಳ ಫಲ ಇದು ಎಂಬುದು ಸರಿ ಎನ್ನಿಸುತ್ತದೆ.



ಆ ಹೊತ್ತಿಗಾಗಲೇ ಊರು ಬಿಟ್ಟವರು ತಮ್ಮ ಅಳಿದುಳಿದ ಅಸ್ತಿ ಪಾಸ್ತಿಗಾಗಿ ಊರಿಗೆ ಮರಳುತ್ತಿದ್ದರು. ಕೆಲವರು ತಮ್ಮ ಮುರಿದು ಬಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಕಳೆದುಕೊಂಡದ್ದು ಸಿಗಬಹುದಾ? ಎಂದು ತಡಕಾಡುತ್ತಿದ್ದರು. ಶಾಲೆಯ ಒಳಗಡೆ ಒಲೆಯೊಂದು ಹೊತ್ತಿ ಉರಿಯುತ್ತಿತ್ತು. ಮುಂದೆ ಕುಳಿತು ಕಟ್ಟಿಗೆ ತುರುಕುತ್ತಿದ್ದ ಅಜ್ಜಿಯೊಂದು ಕ್ಯಾಮರ ಕಂಡೊಡನೆ ತನ್ನ ಸೆರಗನ್ನು ಸರಿಪಡಿಸಿಕೊಂಡಿತು. ಸುಮ್ಮನೆ ನಕ್ಕೆ. ಹತ್ತಿರ ಕರೆದು ’ಏನಾರ ಉಣ್ತೀಯಾ ಮಗಾ’ ಅಂತು. ಮಾತು ಇಲ್ಲವಾಗಿತ್ತು. ’ಇದು ಕಲಿಗಾಲ ಮಗ. ಎಲ್ಲ ಅಳಿತದೆ. ಏನಿದ್ರು ಏನು ಬಂತು ಹೇಳ. ಜನ ಮಾಡಿದ್ದು ಉಣ್ತೀದ್ದಾರೆ’ ಎಂದು ತನ್ನ ತೆಲಗು ಮಿಶ್ರಿತ ಕನ್ನಡದಲ್ಲಿ ಹೇಳಿ ತನ್ನ ಕೆಲಸ ಮುಂದುವರಿಸಿತು ಅಜ್ಜಿ. ಇದಕ್ಕಿಂತ ಜಾಸ್ತಿ ಪಾಪ ಮಾಡಿದವರು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಅಜ್ಜಿ ಎಂದು ಹೇಳಬೇಕೆನ್ನಿಸಿತು. ಯಾಕೋ ಕತ್ತಲೆಯಲ್ಲಿ ನನ್ನ ಅದುರುವ ತುಟಿಗಳು ಅಜ್ಜಿಯ ಕಣ್ಣಿಗೆ ಬೀಳಲಿಲ್ಲ!.

ಎಲೆಬಿಚ್ಚಾಲೆ ಕತ್ತಲನ್ನು ಹೊದ್ದು ಮಲಗಿತ್ತು. ಆಗಷ್ಟೆ ತೆರೆದುಕೊಂಡ ಹೋಟೆಲ್ಲಿಂದ ಯಾರೋ ಟೀ ಕಳುಹಿಸಿದರು. ಕುಡಿದು ಮುಗಿಸಿ ಹೊರಟರೆ ’ಏನಾರ ಉಣ್ತೀಯ ಮಗಾ’ ಅಂದ ಅಜ್ಜಿ ಮುಖ ಎದುರಿಗೆ ಬಂದಂತಾಗಿ ಕಣ್ಣು ಮುಚ್ಚಿಕೊಂಡೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...