ವಿಷಯಕ್ಕೆ ಹೋಗಿ
ಮಂಗಳೂರು ಡೈರಿ. ಭಾಗ-೩

ತೇಜಸ್ವಿ ಜೊತೆ ನಡೆಯದ ಸಂವಾದ
ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ ವಿಸ್ಮಯಕಾರಿ ಜಗತ್ತಿಗೆ ನಾನು ಕಾಲಿಡುತ್ತಿದ್ದ ದಿನಗಳು.


ತೀರ್ಥಹಳ್ಳಿಯಲ್ಲಿ ಪಿಯುಸಿಗೆ ಸೇರಿದ್ದೆ. ಮನೆಯಲ್ಲಿ ಸೈನ್ಸ್ ಕೊಡಿಸಿದ್ದರು. ಮಗ ಮುಂದೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎಂಬ ದೂರದ ನಿರೀಕ್ಷೆ ಅಪ್ಪ, ಅಮ್ಮಂಗೆ ಇತ್ತು. ಆದರೆ ನನಗೆ ಪತ್ರಿಕೋದ್ಯಮ ಹುಚ್ಚು ಅಂಟಿಕೊಂಡಿತು. ಅಲ್ಲಿನ ಸ್ಥಳೀಯ ಪತ್ರಿಕೆ ವಿನೂತನ ಮಾತುಕತೆಯಲ್ಲಿ ಸಂಬಳವಿಲ್ಲದ ಕೆಲಸಕ್ಕೆ ಸೇರಿದ್ದೆ. ಆಗ ಇದ್ದದ್ದು ನಾನು ಬರೆಯಬೇಕು, ಹೆಸರು ಮಾಡಬೇಕು ಎಂಬ ಕಲ್ಪನೆಗಳು ಅಷ್ಟೆ. ಆದರೆ ಹೆಚ್ಚು ಕಡಿಮೆ ಅವತ್ತು ನನಗೆ ಗಾಡ್ ಫಾದರ್ ರೂಪದಲ್ಲಿದ್ದ ನೆಂಪೆ ದೇವರಾಜ್ ತೀರ್ಥಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಅವರಿಂದಲೇ ನನಗೆ ಬಾಬಾಬುಡನ್ ಗಿರಿ ವಿವಾದದ ಪರಿಚಯವಾಗಿತ್ತು. ಸಂಘಪರಿವಾರದ ಶಾಲೆಯಲ್ಲಿ ಓದಿ ಬೆಳೆದಿದ್ದರೂ, ಅವತ್ತಿಗಾಗಲೇ ಕುವೆಂಪು, ತೇಜಸ್ವಿ ಬರಹಗಳಿಂದ ಆರೆಸ್ಸೆಸ್‌ನ ಹುಸಿ ದೇಶ ಪ್ರೇಮ ಮೈಬಿಟ್ಟು ಹೋಗಿತ್ತು.

ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆಯ ಎರಡನೆ ವರ್ಷದ ಕಾರ್ಯಕ್ರಮ. ತೀರ್ಥಹಳ್ಳಿಯ ಸಹೃದಯರು, ಕೆಲವು ಹಳೆಯ ತಲೆಮಾರಿನ ಹೋರಾಟಗಾರರು ಹಾಗೂ ರೈತ ಸಂಘದವರ ಜೊತೆ ಬಸ್ಸು ಮಾಡಿಕೊಂಡು ಹೋಗುವಾಗಲೇ ನಾನು ಥ್ರಿಲ್ ಆಗಿದ್ದೆ. ಕಾರ್ಯಕ್ರಮ ಅದ್ಭುತವಾಗಿತ್ತು. ಆಂದ್ರದಿಂದ ಗದ್ದರ್ ಬಂದಿದ್ದರು. ಅವತ್ತು ಚಿಕ್ಕಮಂಗಳೂರಿನ ರೋಡ್ ಶೋ ನನಗೆ ಹೊಸ ರೋಮಾಂಚನವನ್ನೇ ಧಾರೆ ಎರೆದಂತೆ ಭಾಸವಾಗಿತ್ತು.

ಸಂಜೆ ಕಾರ್ಯಕ್ರಮ ಮುಗಿಸಿ ಬರುವಾಗ ನಮ್ಮ ಬಸ್ಸಿನಲ್ಲೇ ರಹಮತ್ ತರೀಕೆರೆ ಬಂದಿದ್ದರು. ಅವರು ಮಾರನೆ ದಿನ ಕುಪ್ಪಳ್ಳಿಯಲ್ಲಿ ನಡೆಯಲಿದ್ದ ಕುವೆಂಪು ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತೀರ್ಥಹಳ್ಳಿಗೆ ಬರುತ್ತಿದ್ದಾರೆ ಎಂದು ದೇವರಾಜಣ್ಣ ಹೇಳಿದರು.

ನನಗೆ ಅವರನ್ನೆಲ್ಲ ನೋಡುವುದೇ ಹಬ್ಬ. ಮಾತನಾಡಿಸುವ ತವಕ. ಜನರ ಪರವಾಗಿ ಕೆಲಸಮಾಡುತ್ತಿದ್ದೇವೆ ಎಂಬ ಭ್ರಮೆ ಇರುವಾಗ ಇಂಟೆಲೆಕ್ಚುಯಲ್ಸ್‌ಗಳ ಕುರಿತು ಸಹಜವಾಗಿಯೇ ಅಭಿಮಾನ ಬೆಳೆಯುತ್ತದೆ (ಇವತ್ತಿಗೂ ರಹಮತ್ ತರೀಕೆರೆ ವಿಷಯದಲ್ಲಿ ನಿಲುವು ಬದಲಾಗಿಲ್ಲ ಬಿಡಿ).

ಮಾರನೇ ದಿನ ಕುಪ್ಪಳ್ಳಿಯ ಕಾರ್ಯಕ್ರಮಕ್ಕೆ ಹೋದರೆ ದೊಡ್ಡ ಹೆಸರು ಮಾಡಿದವರ ದಂಡು. ಅಗ್ನಿ ಶ್ರೀಧರ್ ಬಂದಿದ್ದರು, ಜೊತೆಗೆ ಅವರ ಹಿಂಬಾಲಕ ಪಡೆ!. ನೋಡುವುದೇ ಖುಷಿ. ಮಧ್ಯಾನದ ಬಿಡುವಿನ ವೇಳೆ ಶ್ರೀದರ್ ಹತ್ತಿರ ಹೋಗಿ "ಚಿಕ್ಕಮಗಳೂರಿನಲ್ಲಿ ನಿಮ್ಮ ಭಾಷಣ ಚೆನ್ನಾಗಿತ್ತು ಸಾರ್" ಎಂದು ಸುಳ್ಳೆ ಹೇಳಿದೆ. ನನಗೆ ಆ ಕ್ಷಣದಲ್ಲಿ ಅವರನ್ನು ಮಾತನಾಡಿಸಲು ಒಂದು ನೆಪ ಬೇಕಿತ್ತು ಅಂತ ಇವತ್ತು ಅನ್ನಿಸುತ್ತದೆ. ಅವರೂ ಖುಷಿ ಆದರು ಮತ್ತು "ಸಂಘಪರಿವಾರದ ಕುರಿತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು, ನಿಮ್ಮಂತ ಯುವಕರು ಮುಂದೆ ಬರುತ್ತಿರುವುದು ನಮಗೂ ಸ್ಪೂರ್ತಿ" ಎಂದರು. ನಾನು ಮತ್ತೂ ಖುಷಿಯಾದೆ.

ಊಟದ ನಂತರ ತೇಜಸ್ವಿಯವರ ಜೊತೆ ಸಂವಾದ ಕಾರ್ಯಕ್ರಮ. ನನಗೆ ತಜಸ್ವಿಯವರ ಕುರಿತು ಅಸಹನೆ. ಅವರ ಬರಹಗಳನ್ನೆಲ್ಲ ಓದಿ ಪ್ರೇರೆಪಿತನಾದ ನಾನು ಹೋರಾಟಕ್ಕೆ ಧುಮುಕಿರುವಾಗ ತೇಜಸ್ವಿಯವರು ಬಾಬಾಬುಡನ್ ಗಿರಿ ವಿವಾದದಲ್ಲಿ ಮುಂಚೂಣಿಗೆ ಬರಲಿಲ್ಲವಲ್ಲ ಎಂಬ ಕೋಪ. ಅವರ ಸಂವಾದ ಪ್ರಾರಂಭವಾಯಿತು. ಮೊದಲು ಯಾರೋ ಪ್ರಶ್ನೇ ಕೇಳಿದರು. "ಸಾರ್ ಕುವೆಂಪು ಮಗನಾಗಿ ಹುಟ್ಟಿದ್ದಕ್ಕೆ ಏನನ್ನಿಸುತ್ತದೆ" ಎಂದು. (ಎಂತಹ ಕೆಲಸಕ್ಕೆ ಬಾರದ ಪ್ರಶ್ನೆ). ಎರಡನೆ ಪ್ರಶ್ನೆ ಕೇಳಲು ನಾನೇ ಮುಂದೆ ಹೋಗಿ ಮೈಕ್ ತೆಗೆದುಕೊಂಡೆ. ಕೈ, ಮೈ, ಎಲ್ಲಾ ಬೆವರುತ್ತಿತ್ತು. ದೈರ್ಯ ತಂದುಕೊಂಡು ಕೇಳಿದೆ, "ಸಾರ್ ನೀವು ಬದುಕುವ ಮೂಡಗೆರೆಯಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದ್ದರೆ ನೀವು ಬೆಂಗಳೂರಿನಲ್ಲಿ ಫೋಟೋ ಪ್ರದರ್ಶನ ನಡೆಸುತ್ತಿದ್ದರಲ್ಲ, ಸರಿನಾ?", ಕೇಳೆಬಿಟ್ಟೆ. ಸಭೆ ಮೌನವಾಯಿತು. ಆಗ ನೀವೊಮ್ಮೆ ತೇಜಸ್ವಿಯರನ್ನು ನೋಡಬೇಕಿತ್ತು. ಉಗ್ರಾವತಾರ, ಅವರ ಪಕ್ಕದಲ್ಲಿದ್ದ ಚಕ್ರ ಪ್ರತಿಷ್ಥಾನದ ಶಿವಾ ರೆಡ್ಡಿಯವರಂತೂ ಊರೇ ಮುಳುಗಿ ಹೋದಂತೆ ನನ್ನನ್ನು ವೇದಿಕೆಯಿಂದಲೇ ಬಯ್ಯಲು ಪ್ರಾರಂಭಿಸಿದರು.

ತಕ್ಷಣ ಕೆಲವು ಹೋರಾಟಗಾರರು ನನ್ನ ನೆರವಿಗೆ ಬಂದರು. ವಾದ ವಿವಾದ ಪ್ರಾರಂಭವಾಯಿತು. ಕೊನೆಗೆ ಮುಂದಿನ ಪ್ರಶ್ನೆ ಇಲ್ಲದೆ ತೇಜಸ್ವಿಯವರ ಜೊತೆಗಿನ ಸಂವಾದ ಮುಗಿದು ಹೋಯಿತು. ಟೀ ವಿರಾಮದಲ್ಲಿ ಎಲ್ಲರದೂ ಅದೇ ಚರ್ಚೆ. ನನಗೆ ರಹಮತ್ ಸಿಕ್ಕರು, ಒಳ್ಳೆಯ ಪ್ರಶ್ನೆ, ಆದರೆ ಅದಕ್ಕೆ ಹಾಗೆ ಪ್ರತಿಕ್ರಿಯಿಸಬಾರದಿತ್ತು ಎಂದರು. ನಾನಂತೂ ತುಂಬಾನೆ ಖುಷಿಯಾಗಿದ್ದೆ. ಅದೇ ಖುಷಿಯಲ್ಲಿ ಮುಂದಿನ ವಾರ ವಿನೂತನ ಮಾತುಕತೆಯಲ್ಲಿ ಮುಖಪುಟ ಲೇಖನವನ್ನೂ ಬರೆದೆ. ತೇಜಸ್ವಿಯವರಿಂದ ಶುರು ಮಾಡಿ, ಕುಪ್ಪಳ್ಳಿ ಪ್ರತಿಷ್ಠಾನದ ಸೋಗಲಾಡಿತದವರೆಗೆ ಬರೆದು ಎಲ್ಲರ ಮೆಚ್ಚುಗೆ ಗಳಿಸಿದೆ.

ಇರಲಿ, ನಂತರ ಸಂಜೆ ಕವಿಮನೆಯ ಜಗುಲಿ ಮೇಲೆ ತೇಜಸ್ವಿ ಒಬ್ಬರೆ ಕುಳಿತಿದ್ದರು. ನಾನು ಸುಮ್ಮನೆ ಅವರ ಪಕ್ಕದಲ್ಲಿ ಹೋಗಿ ನಿಂತೆ. ಯಾರ ಮಗನೋ? ಅಂದರು ನಗುತ್ತಾ. ನನ್ನ ಪರಿಚಯ ಮಾಡಿಕೊಂಡೆ. ಓ ನಿಮ್ಮಜ್ಜ ಗೊತ್ತಪ್ಪ. ಅಪ್ಪ ಏನು ಮಾಡುತ್ತಿದ್ದ್ದಾನೆ. ಎಷ್ಟು ಮಕ್ಕಳೋ ನೀವು? ಓದ್ರಿ ಚೆನ್ನಾಗಿ, ಕತೆ-ಗಿತೆ ಬರೀತಿಯಾ? ಎಂದು ಪ್ರೀತಿಯಿಂದ ಮಾತನಾಡಿಸಿದರು. ಮಧ್ಯಾನ ನಡೆದ ಘಟನೆ ಮರೆತಿದ್ದರಾ?.

ತೇಜಸ್ವಿ ಸತ್ತಾಗ ಇವೆಲ್ಲಾ ನೆನಪಾಯಿತು. ಅವತ್ತೇ ಬರೆದು ಬಿಡುವ ಮನಸ್ಸಾಯಿತು. ಆದರೆ ಆಗಿರಲಿಲ್ಲ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...