ವಿಷಯಕ್ಕೆ ಹೋಗಿ

'ಕನಸಿನ ಎಡಿಟರ್'!


ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ!
ಇ. ರಾಘವನ್
ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ!
ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾರಿಕೆಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ಕಾದು, ಕೊನೆಗೆ ಸುದ್ದಿ ಹೆಕ್ಕಿಕೊಂಡು ಕಚೇರಿಗೆ ಬಂದು ಟೈಪಿಸಿ, ತಿದ್ದಿಸಿಕೊಂಡು, ಮತ್ತೆ ಸರಿಯಾದ 'ಕಾಪಿ' ಕೊಟ್ಟು, ಕೆಲಸ ಮುಗಿಸಿ ಹೊರಗೆ ಅಡ್ಡಾಡುತ್ತಿದ್ದ ಕಾಲ ಅದು. ಅಷ್ಟೊತ್ತಿಗಾಗಲೇ ಸಂಪಾದಕರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವಿಚಾರ ಗೊತ್ತಾಗಿತ್ತು. ಆದರೆ ಉಗಾದಿಯ ಮುನ್ನ ದಿನ ರಾತ್ರಿ ತಮ್ಮ ಕೊನೆಯ 'ಕರ್ತವ್ಯದ ಸಮಯ'ದಲ್ಲಿ ಅವರು ಸಂತೃಪ್ತಿ ಭಾವದಲ್ಲಿ ಮುಗಿಸಿ ಮನೆಗೆ ಹೋದ ಪರಿ ಕಣ್ಣಿಗೆ ಕಟ್ಟಿದಂತಿತ್ತು. ಹಾಗಾಗಿ ಸಾವಿನಂತಹ ವಿಚಾರದ ಚಿಕ್ಕ ಎಳೆ ಕೂಡ ಮನಸ್ಸಿಗೆ ಬಂದಿರಲಿಲ್ಲ.
ಅವರು ಇದ್ದದ್ದು, ನನಗೆ ಅರ್ಥವಾಗಿದ್ದೇ ಹಾಗೆ...ಸದಾ ಸೌಮ್ಯವಾಗಿ, ಇಡೀ ಕಚೇರಿ ತುಂಬ ಓಡಾಡಿಕೊಂಡಿರುತ್ತಿದ್ದರು. ಕಚೇರಿಗೆ ಹುಡುಕಿಕೊಂಡು ಬರುವ ಸಾಮಾನ್ಯ ಜನರಿಗೂ ಅವರು 'ಕೇಳುಗ'ರಾಗಿದ್ದರು. ಪತ್ರಿಕೋದ್ಯಮ ಎಂಬ ಪಾಕಶಾಲೆಯಲ್ಲಿ ದಿನನಿತ್ಯವೂ ಹೊಸತನದಿಂದ ಯೋಚಿಸುವ ಅವರಿಗೆ ನಲವತ್ತು ವರ್ಷಗಳನ್ನು ಕಳೆದ ಅನುಭವವಿತ್ತು. ಆದರೆ ಅದನ್ನು ಪ್ರೀತಿಯಿಂದಲೇ ಮಾಡುಕೊಂಡು ಹೋಗುವ ಬಯಕೆ ಮತ್ತು ಸ್ಥಿತ ಪ್ರಜ್ಞೆ ಕಾಣುತ್ತಿತ್ತು. ಇನ್ನೂ 'ಫೀಲ್ಡ್'ಗೆ ಬಂದು ಎರಡು ವರ್ಷವೂ ತುಂಬದ ನನ್ನಂತವರಿಗೆ ಅವರು ಹೇಳದೇನೆ ಕಲಿಸುವ ಪರಿ ಇಷ್ಟವಾಗುತ್ತಿತ್ತು. ಬಹುಶಃ ಇದೇ ಸಮಯದಲ್ಲಿ ಪಾರ್ಕಿನ್ಸನ್ ಎಂಬ ಔಷಧಿ ಇಲ್ಲದ ಖಾಯಿಲೆ ಜತೆ ಹೆಣಗುತ್ತಿರುವ ಸಮಾಜವಾದಿ ಮನಸ್ಸಿನ ತಂದೆಯನ್ನು ಇವರಲ್ಲಿ ಕಾಣುತ್ತಿದ್ದೆ ಅನ್ನಿಸುತ್ತದೆ.
ಇದಕ್ಕೂ ಕಾರಣವಿದೆ ಅಂತ ಇವತ್ತು ಅನ್ನಿಸುತ್ತಿದೆ. 'ವಿ.ಕ'ದಲ್ಲಿ ಸಂದರ್ಶನ ಮುಗಿದು, ಕೆಲಸಕ್ಕೆ ಹಾಜರಾದ ನಂತರ ನನ್ನನ್ನು ನೋಡಿದ ಮಾತನಾಡಿಸಿದ ಸಂಪಾದಕ ಅವರಾಗಿದ್ದರು. ಮೊದಲ ಭೇಟಿಯಲ್ಲೇ 'ಗರ್ಲ್ ಫ್ರೆಂಡ್ ಇದಾರಾ?' ಅಂತ ಕೇಳಿದ್ದರು. ನನಗೆ ಸುಳ್ಳು ಹೇಳಲು ಮನಸ್ಸಾಗಿರಲಿಲ್ಲ. ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಅವರು ಇದ್ದದ್ದೇ ಹಾಗೆ. ಎಲ್ಲವನ್ನೂ ಸಂಕೋಚದಿಂದಲೇ ನಿರ್ಧಾರ ತೆಗೆದುಕೊಳ್ಳುವಂತೆ ಕಾಣುತ್ತಿದ್ದರು. ಆದರೆ ಆಳದಲ್ಲಿ ತಮ್ಮ ನಿರ್ಧಾರದ ಜಾರಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಂಡ ಹೋರಾಟಗಾರನ ಛಲ ಇರುತ್ತಿತ್ತು. ಒಂದು ಪುಟ್ಟ ಸಾಧನೆ ಮಾಡಿ ಮುಗಿಸಿ ಎದುರಿಗೆ ಬಂದು ನಿಲ್ಲುವ ಹೊತ್ತಿಗೆ ಅವರು ಎದುರಿನ ಸ್ವಾಗತಕಾರರ ಬಳಿ ಬಂದು ನಗುಮುಖ ಹೊತ್ತು ನಿಂತಿರುತ್ತಿದ್ದರು. ಒಬ್ಬ ಸಂಪಾದಕ ಕನಿಷ್ಠ ತನ್ನ ಕ್ಯಾಬಿನ್ ಬಿಟ್ಟು ಹೊರಗೆ ಇರಬೇಕು ಎಂಬ ಸರಳ ಪಾಠವನ್ನು ಅವರು 'ಕಮ್ಯುನಿಕೇಟ್' ಮಾಡುತ್ತಿದ್ದ ಪರಿ ಇದು.
ಬಹುಶಃ ಕನ್ನಡ ಪತ್ರಿಕೋದ್ಯಮದ 'ಸಂಪಾದಕೀಯ' ವಿಭಾಗದಲ್ಲಿ ಹೊಸ ಅಲೆಯೊಂದು ಬಂದ ಕತೆಯನ್ನು ಇವತ್ತೇ ಹೇಳಿಬಿಟ್ಟರೆ ಅದು ಅವರು ನಂಬಿದ ಸಿದ್ಧಾಂತಕ್ಕೂ ವಿರುದ್ಧ ಅಂತ ಅನ್ನಿಸುತ್ತದೆ. ಪತ್ರಿಕೆಯೊಂದು ಯಾವ ನಿಲುವು ಹೊಂದಿರಬೇಕು? ಪತ್ರಕರ್ತನೊಬ್ಬನ ಹೊಣೆಗಾರಿಕೆ ಏನು? ವೈಯುಕ್ತಿಕ ಮಟ್ಟದಲ್ಲಿ ಸುದ್ದಿ ಮಾಡುವವರು ಹೇಗೆ ಬದುಕಬೇಕು? ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ಒಳಗೊಂಡು ಕೆಲಸ ಮಾಡಿ ನಿರೂಪಿಸಿ ತೋರಿಸುತ್ತಿದ್ದರು. ಅಲ್ಲಿ ನಿಲುವುಗಳು, ಸಿದ್ದಾಂತಗಳು, ಜಾತಿಗಳು, ಧರ್ಮದ ಅಮಲು, ಸ್ವಾರ್ಥ ಎಲ್ಲವನ್ನೂ ಬಿಟ್ಟು ಬದುಕುವ ಅವಕಾಶ ಕಲ್ಪಸಲು ಶ್ರಮವಹಿಸಿದ್ದರು. ಹಾಗಾಗಿಯೇ ಅವರು ಅಗಲಿದ ಮೇಲೂ ಕಾಡುವುದಕ್ಕೆ ಕಾರಣಗಳು ಸಿಗುತ್ತಿವೆ.
ಯಾರೋ ಸ್ನೇಹಿತರೊಬ್ಬರು ಹೇಳಿದರು, ಅವರ ಸಾವು 'ಪತ್ರಿಕೆ' ಎಷ್ಟು ಲಾಸ್ ಅಲ್ವಾ? ಅಂತ; ಸೌಜನ್ಯದಿಂದಲೇ! ಆದರೆ ನನಗೆ ಹೇಳಬೇಕು ಅನ್ನಿಸಿದ್ದು ಇಷ್ಟೆ: ಲಾಸ್ ಆಗಿರುವುದು ಕನ್ನಡ ಪತ್ರಿಕೋದ್ಯಮಕ್ಕೆ ಕನಸುಗಳನ್ನು ಕಟ್ಟಿಕೊಂಡು ಬರುವ ಯುವ ತಲೆಮಾರಿನ ಪತ್ರಕರ್ತರಿಗೆ...ಹಾಗಾಗಿಯೇ ಅವರ ಸಾವು ಯುವ ಪತ್ರಕರ್ತರ 'ಕನಸಿನ ಎಡಿಟರ್' ಒಬ್ಬರ ಸಾವು ಅಂತ ಅನ್ನಿಸುತ್ತಿರುವುದು. ಅಷ್ಟೆ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ