ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ!
ಇ. ರಾಘವನ್ |
ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾರಿಕೆಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ಕಾದು, ಕೊನೆಗೆ ಸುದ್ದಿ ಹೆಕ್ಕಿಕೊಂಡು ಕಚೇರಿಗೆ ಬಂದು ಟೈಪಿಸಿ, ತಿದ್ದಿಸಿಕೊಂಡು, ಮತ್ತೆ ಸರಿಯಾದ 'ಕಾಪಿ' ಕೊಟ್ಟು, ಕೆಲಸ ಮುಗಿಸಿ ಹೊರಗೆ ಅಡ್ಡಾಡುತ್ತಿದ್ದ ಕಾಲ ಅದು. ಅಷ್ಟೊತ್ತಿಗಾಗಲೇ ಸಂಪಾದಕರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವಿಚಾರ ಗೊತ್ತಾಗಿತ್ತು. ಆದರೆ ಉಗಾದಿಯ ಮುನ್ನ ದಿನ ರಾತ್ರಿ ತಮ್ಮ ಕೊನೆಯ 'ಕರ್ತವ್ಯದ ಸಮಯ'ದಲ್ಲಿ ಅವರು ಸಂತೃಪ್ತಿ ಭಾವದಲ್ಲಿ ಮುಗಿಸಿ ಮನೆಗೆ ಹೋದ ಪರಿ ಕಣ್ಣಿಗೆ ಕಟ್ಟಿದಂತಿತ್ತು. ಹಾಗಾಗಿ ಸಾವಿನಂತಹ ವಿಚಾರದ ಚಿಕ್ಕ ಎಳೆ ಕೂಡ ಮನಸ್ಸಿಗೆ ಬಂದಿರಲಿಲ್ಲ.
ಅವರು ಇದ್ದದ್ದು, ನನಗೆ ಅರ್ಥವಾಗಿದ್ದೇ ಹಾಗೆ...ಸದಾ ಸೌಮ್ಯವಾಗಿ, ಇಡೀ ಕಚೇರಿ ತುಂಬ ಓಡಾಡಿಕೊಂಡಿರುತ್ತಿದ್ದರು. ಕಚೇರಿಗೆ ಹುಡುಕಿಕೊಂಡು ಬರುವ ಸಾಮಾನ್ಯ ಜನರಿಗೂ ಅವರು 'ಕೇಳುಗ'ರಾಗಿದ್ದರು. ಪತ್ರಿಕೋದ್ಯಮ ಎಂಬ ಪಾಕಶಾಲೆಯಲ್ಲಿ ದಿನನಿತ್ಯವೂ ಹೊಸತನದಿಂದ ಯೋಚಿಸುವ ಅವರಿಗೆ ನಲವತ್ತು ವರ್ಷಗಳನ್ನು ಕಳೆದ ಅನುಭವವಿತ್ತು. ಆದರೆ ಅದನ್ನು ಪ್ರೀತಿಯಿಂದಲೇ ಮಾಡುಕೊಂಡು ಹೋಗುವ ಬಯಕೆ ಮತ್ತು ಸ್ಥಿತ ಪ್ರಜ್ಞೆ ಕಾಣುತ್ತಿತ್ತು. ಇನ್ನೂ 'ಫೀಲ್ಡ್'ಗೆ ಬಂದು ಎರಡು ವರ್ಷವೂ ತುಂಬದ ನನ್ನಂತವರಿಗೆ ಅವರು ಹೇಳದೇನೆ ಕಲಿಸುವ ಪರಿ ಇಷ್ಟವಾಗುತ್ತಿತ್ತು. ಬಹುಶಃ ಇದೇ ಸಮಯದಲ್ಲಿ ಪಾರ್ಕಿನ್ಸನ್ ಎಂಬ ಔಷಧಿ ಇಲ್ಲದ ಖಾಯಿಲೆ ಜತೆ ಹೆಣಗುತ್ತಿರುವ ಸಮಾಜವಾದಿ ಮನಸ್ಸಿನ ತಂದೆಯನ್ನು ಇವರಲ್ಲಿ ಕಾಣುತ್ತಿದ್ದೆ ಅನ್ನಿಸುತ್ತದೆ.
ಇದಕ್ಕೂ ಕಾರಣವಿದೆ ಅಂತ ಇವತ್ತು ಅನ್ನಿಸುತ್ತಿದೆ. 'ವಿ.ಕ'ದಲ್ಲಿ ಸಂದರ್ಶನ ಮುಗಿದು, ಕೆಲಸಕ್ಕೆ ಹಾಜರಾದ ನಂತರ ನನ್ನನ್ನು ನೋಡಿದ ಮಾತನಾಡಿಸಿದ ಸಂಪಾದಕ ಅವರಾಗಿದ್ದರು. ಮೊದಲ ಭೇಟಿಯಲ್ಲೇ 'ಗರ್ಲ್ ಫ್ರೆಂಡ್ ಇದಾರಾ?' ಅಂತ ಕೇಳಿದ್ದರು. ನನಗೆ ಸುಳ್ಳು ಹೇಳಲು ಮನಸ್ಸಾಗಿರಲಿಲ್ಲ. ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಅವರು ಇದ್ದದ್ದೇ ಹಾಗೆ. ಎಲ್ಲವನ್ನೂ ಸಂಕೋಚದಿಂದಲೇ ನಿರ್ಧಾರ ತೆಗೆದುಕೊಳ್ಳುವಂತೆ ಕಾಣುತ್ತಿದ್ದರು. ಆದರೆ ಆಳದಲ್ಲಿ ತಮ್ಮ ನಿರ್ಧಾರದ ಜಾರಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಂಡ ಹೋರಾಟಗಾರನ ಛಲ ಇರುತ್ತಿತ್ತು. ಒಂದು ಪುಟ್ಟ ಸಾಧನೆ ಮಾಡಿ ಮುಗಿಸಿ ಎದುರಿಗೆ ಬಂದು ನಿಲ್ಲುವ ಹೊತ್ತಿಗೆ ಅವರು ಎದುರಿನ ಸ್ವಾಗತಕಾರರ ಬಳಿ ಬಂದು ನಗುಮುಖ ಹೊತ್ತು ನಿಂತಿರುತ್ತಿದ್ದರು. ಒಬ್ಬ ಸಂಪಾದಕ ಕನಿಷ್ಠ ತನ್ನ ಕ್ಯಾಬಿನ್ ಬಿಟ್ಟು ಹೊರಗೆ ಇರಬೇಕು ಎಂಬ ಸರಳ ಪಾಠವನ್ನು ಅವರು 'ಕಮ್ಯುನಿಕೇಟ್' ಮಾಡುತ್ತಿದ್ದ ಪರಿ ಇದು.
ಬಹುಶಃ ಕನ್ನಡ ಪತ್ರಿಕೋದ್ಯಮದ 'ಸಂಪಾದಕೀಯ' ವಿಭಾಗದಲ್ಲಿ ಹೊಸ ಅಲೆಯೊಂದು ಬಂದ ಕತೆಯನ್ನು ಇವತ್ತೇ ಹೇಳಿಬಿಟ್ಟರೆ ಅದು ಅವರು ನಂಬಿದ ಸಿದ್ಧಾಂತಕ್ಕೂ ವಿರುದ್ಧ ಅಂತ ಅನ್ನಿಸುತ್ತದೆ. ಪತ್ರಿಕೆಯೊಂದು ಯಾವ ನಿಲುವು ಹೊಂದಿರಬೇಕು? ಪತ್ರಕರ್ತನೊಬ್ಬನ ಹೊಣೆಗಾರಿಕೆ ಏನು? ವೈಯುಕ್ತಿಕ ಮಟ್ಟದಲ್ಲಿ ಸುದ್ದಿ ಮಾಡುವವರು ಹೇಗೆ ಬದುಕಬೇಕು? ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ಒಳಗೊಂಡು ಕೆಲಸ ಮಾಡಿ ನಿರೂಪಿಸಿ ತೋರಿಸುತ್ತಿದ್ದರು. ಅಲ್ಲಿ ನಿಲುವುಗಳು, ಸಿದ್ದಾಂತಗಳು, ಜಾತಿಗಳು, ಧರ್ಮದ ಅಮಲು, ಸ್ವಾರ್ಥ ಎಲ್ಲವನ್ನೂ ಬಿಟ್ಟು ಬದುಕುವ ಅವಕಾಶ ಕಲ್ಪಸಲು ಶ್ರಮವಹಿಸಿದ್ದರು. ಹಾಗಾಗಿಯೇ ಅವರು ಅಗಲಿದ ಮೇಲೂ ಕಾಡುವುದಕ್ಕೆ ಕಾರಣಗಳು ಸಿಗುತ್ತಿವೆ.
ಯಾರೋ ಸ್ನೇಹಿತರೊಬ್ಬರು ಹೇಳಿದರು, ಅವರ ಸಾವು 'ಪತ್ರಿಕೆ' ಎಷ್ಟು ಲಾಸ್ ಅಲ್ವಾ? ಅಂತ; ಸೌಜನ್ಯದಿಂದಲೇ! ಆದರೆ ನನಗೆ ಹೇಳಬೇಕು ಅನ್ನಿಸಿದ್ದು ಇಷ್ಟೆ: ಲಾಸ್ ಆಗಿರುವುದು ಕನ್ನಡ ಪತ್ರಿಕೋದ್ಯಮಕ್ಕೆ ಕನಸುಗಳನ್ನು ಕಟ್ಟಿಕೊಂಡು ಬರುವ ಯುವ ತಲೆಮಾರಿನ ಪತ್ರಕರ್ತರಿಗೆ...ಹಾಗಾಗಿಯೇ ಅವರ ಸಾವು ಯುವ ಪತ್ರಕರ್ತರ 'ಕನಸಿನ ಎಡಿಟರ್' ಒಬ್ಬರ ಸಾವು ಅಂತ ಅನ್ನಿಸುತ್ತಿರುವುದು. ಅಷ್ಟೆ...